ಪುಲ್ಲೇಲ ಗೋಪಿಚಂದ್ ( ನವೆಂಬರ್ ೧೬ , ೧೯೭೩ ರಂದು ಜನನ) ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ. ಇವರು ಪ್ರಕಾಶ್ ಪಡುಕೋಣೆ ನಂತರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಸಾಧನೆಗೈದ ಎರಡನೇ ಭಾರತೀಯ ಆಟಗಾರ. ಸದ್ಯ ಇವರು ತಮ್ಮದೇ ಆದ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯನ್ನು ನೆಡೆಸುತ್ತಿದ್ದಾರೆ . == ಆರಂಭಿಕ ಜೀವನ == ಪುಲ್ಲೇಲ ಗೋಪಿಚಂದ್ ಅವರು ಪುಲ್ಲೇಲ ಸುಭಾಷ್ ಚಂದ್ರ ಮತ್ತು ಸುಬ್ಬರಾವಮ್ಮ ದಂಪತಿಗಳಿಗೆ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ನಗಂಡ್ಲ ಎಂಬ ಊರಿನಲ್ಲಿ ಜನಿಸಿದರು(ನವೆಂಬರ್ ೧೬, ೧೯೭೩ ರಂದು ಜನಿಸಿದರು). ಮೊದಮೊದಲು ಗೋಪಿಚಂದ್ ಕ್ರಿಕೆಟ್ ಆಟದಲ್ಲಿ ಹೆಚ್ಚು ಆಸಕ್ತನಾಗಿದ್ದ . ಆದರೆ ಅವರ ಹಿರಿಯ ಸಹೋದರ ಅವನಿಗೆ ಕ್ರಿಕೆಟ್ ನ ಬದಲಾಗಿ ಬ್ಯಾಡ್ಮಿಂಟನ್ ಆಟವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. ನಂತರದ ದಿನಗಳಲ್ಲಿ ಅವರು ಹೈದರಾಬಾದ್ ನ ಎ.ವಿ ಕಾಲೇಜ್ ಸೇರಿದರು ಮತ್ತು ಸಾರ್ವಜನಿಕ ಆಡಳಿತದಲ್ಲಿ ಪದವಿ ಪಡೆದರು. ಅವರು ೧೯೯೦ ಮತ್ತು ೧೯೯೧ ರಲ್ಲಿ ಭಾರತೀಯ ಸಂಯೋಜಿತ ವಿಶ್ವವಿದ್ಯಾಲಯಗಳ ಬ್ಯಾಡ್ಮಿಂಟನ್ ತಂಡದ ನಾಯಕರಾಗಿದ್ದರು. == ಆಟದ ವೃತ್ತಿಜೀವನ == ಆರಂಭಿಕ ಕ್ರೀಡಾ ವೃತ್ತಿಜೀವನದಲ್ಲಿ ಪ್ರಕಾಶ್ ಪಡುಕೋಣೆ ಯವರ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಸೇರುವುದಕ್ಕೂ ಮೊದಲು ಗೋಪಿಚಂದ್ ಅವರಿಗೆ ಎಸ್.ಎಂ. ಆರಿಫ್ ಕೋಚ್ ಆಗಿದ್ದರು8. ಇವರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ದಲ್ಲಿ ಗಂಗೂಲಿ ಪ್ರಸಾದ್ ಅವರಿಂದಲೂ ತರಬೇತಿ ಪಡೆದರು. ಗೋಪಿಚಂದ್ ೧೯೯೬ ರಲ್ಲಿ ತಮ್ಮ ಮೊದಲ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಗೆದ್ದರು, ಮತ್ತು ೨೦೦೦ ದನೆಯ ಇಸವಿಯ ವರೆವಿಗೆ ಸತತವಾಗಿ ಐದು ಬಾರಿ ಪ್ರಶಸ್ತಿಯನ್ನು ಗೆದ್ದರು. ನಂತರ ಇಂಫಾಲದಲ್ಲಿ ೧೯೯೮ ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕವನ್ನು ಗೆದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಥಾಮಸ್ ಕಪ್ ಪಂದ್ಯಾವಳಿಗಳಲ್ಲಿ ಭಾರತವನ್ನು ಮೂರು ಬಾರಿ ಪ್ರತಿನಿಧಿಸಿದರು. ೧೯೯೬ ರಲ್ಲಿ ಅವರು ವಿಜಯವಾಡದಲ್ಲಿ ಜರುಗಿದ ಸಾರ್ಕ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದು ೧೯೯೭ ರಲ್ಲಿ ಕೊಲೊಂಬೊದಲ್ಲಿ ನಡೆದ ಸಾರ್ಕ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಚಿನ್ನದ ಪದಕವನ್ನು ಗೆದ್ದರು. ೧೯೯೮ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೀಮ್ ಈವೆಂಟ್ ನಲ್ಲಿ ಕಂಚು ಮತ್ತು ಪುರುಷರ ಸಿಂಗಲ್ಸ್ ನಲ್ಲಿ ಬೆಳ್ಳಿಯ ಪದಕವನ್ನು ಗೆದ್ದರು. ೧೯೯೯ ರಲ್ಲಿ ಅವರು ಫ್ರಾನ್ಸಿನ ಓಪನ್ ಚಾಂಪಿಯನ್ಷಿಪ್ ಮತ್ತು ಸ್ಕಾಟ್ಲೆಂಡ್ನಲ್ಲಿ ಸ್ಕಾಟಿಷ್ ಓಪನ್ ಚ್ಯಾಂಪಿಯನ್ಶಿಪ್ ಅನ್ನು ಗೆದ್ದರು. ಇದೇ ವರ್ಷದಲ್ಲಿ ಹೈದರಾಬಾದ್ನಲ್ಲಿ ನಡೆದ ಏಷ್ಯನ್ ಉಪಗ್ರಹ ಪಂದ್ಯಾವಳಿ ಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಮುಂದಿನ ದಿನಗಳಲ್ಲಿ ಜರುಗಿದ ಜರ್ಮನ್ ಗ್ರಾಂಡ್ ಪ್ರಿಕ್ಸ್ ಚಾಂಪಿಯನ್ಷಿಪ್ನ ಅಂತಿಮ ಪಂದ್ಯದಲ್ಲಿ ಸೋತು ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡರು. ೨೦೦೧ ರಲ್ಲಿ ಗೋಪಿಚಂದ್ ಅವರು ಲಂಡನ್ ನಲ್ಲಿ ಜರುಗಿದ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆದ್ದರು. ಈ ಟ್ರೋಫಿ ಎತ್ತುವ ಮೊದಲು ಸೆಮಿಫೈನಲ್ಸ್ ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಪೀಟರ್ ಗೇಡ್ ಅವರನ್ನು ಸೋಲಿಸಿದರು. ನಂತರ ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಪಂದ್ಯದಲ್ಲಿ ಸೋಲಿಸುವ ಮೂಲಕ ೧೯೮೯ ರಲ್ಲಿ ಪ್ರಶಸ್ತಿ ಗೆದ್ದ ಪ್ರಕಾಶ್ ಪಡುಕೋಣೆಯವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. == ತರಬೇತಿ ವೃತ್ತಿ == ವೃತ್ತಿಪರ ಆಟದಿಂದ ನಿರ್ಗಮಿಸಿದ ನಂತರ ಗೋಪಿಚಂದ್ ಅವರು ತಮ್ಮದೇ ಆದ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯನ್ನು ಹೈದರಾಬಾದಿನಲ್ಲಿ ಸ್ಥಾಪಿಸಿದರು. ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಇವರ ಅಕಾಡೆಮಿಯಲ್ಲಿ ಹಲವು ಮಂದಿ ರಾಷ್ತ್ರೀಯ ಅಂತರರಾಷ್ತ್ರೀಯ ಖ್ಯಾತಿಯ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ತರಬೇತಿ ಸಂಸ್ಥಯನ್ನು ಸ್ಥಾಪಿಸಿದ ಹೆಗ್ಗಳಿಕೆ ಗೋಪಿಚಂದ್ ಅವರದು. ಖ್ಯಾತ ಆಟಗಾರರಾದ ಸೈನಾ ನೆಹವಾಲ್ , ಪರುಪಳ್ಳಿ ಕಶ್ಯಪ್, ಪಿ.ವಿ. ಸಿಂಧು ಗುರು ಸಾಯಿದತ್ ಸೇರಿದಂತೆ ಹಲವಾರು ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಇವರ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ/ಪಡೆಯುತ್ತಿರುವ ಪ್ರಮುಖರು. == ಸನ್ಮಾನ ಮತ್ತು ಪ್ರಶಸ್ತಿಗಳು == ಅರ್ಜುನ ಪ್ರಶಸ್ತಿ ೧೯೯೯ ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ೨೦೦೧ ರಲ್ಲಿ ಪದ್ಮಶ್ರೀ ಪುರಸ್ಕಾರ/ಪ್ರಶಸ್ತಿ ೨೦೦೫ ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ೨೦೦೯ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ೨೦೧೪ ರಲ್ಲಿ == ವೈಯಕ್ತಿಕ ಜೀವನ == ಗೋಪಿಚಂದ್ ಅವರು ೨೦೦೨ ರ ಜೂನ್ ೫ ರಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ವರಲಕ್ಷ್ಮಿ ಅವರನ್ನು ವಿವಾಹವಾದರು. == ಉಲ್ಲೇಖನಗಳು == == ಬಾಹ್ಯ ಸಂಪರ್ಕಗಳು == 2011-05-18 ವೇಬ್ಯಾಕ್ ಮೆಷಿನ್ ನಲ್ಲಿ.